16.ರಾಮಸೇತು
ಸಮುದ್ರವನ್ನು ಸಾಮಾನ್ಯವಾಗಿ ಎಲ್ಲರೂ ನೋಡಿರುತ್ತಾರೆ. ಸಮುದ್ರದ ಮೇಲೆ ಒಂದಷ್ಟು ಕಿಲೋಮೀಟರು ದೂರ ನಡೆದು ಹೋಗಿ ಆಚೆ ದಡ ಸೇರುವ ಕನಸು ಎಂದಾದರೂ ಕಂಡಿದ್ದೀರಾ? ರಾಮ ಸೇತು ಅಂತಹದೊಂದು ಮಾನವ ನಿರ್ಮಿತ ಸಂಕದಂತೆ ಕಾಣುವ ಒಂದು ವಿಶೇಷವಾದ ಪ್ರಕೃತಿಯ ಸಹಜ ರಚನೆ. ತಮಿಳುನಾಡಿನ ರಾಮೇಶ್ವರದ ಮೂಡಣ ಕಡಲ ತೀರದ ಪಂಬನ್ ದ್ವೀಪದಿಂದ ಶ್ರೀಲಂಕಾದ ವಾಯುವ್ಯ ಮೂಲೆಯ ಮನ್ನಾರಿಗೆ ಜೋಡಿಸುವ ಕಡಲ ಸೇತುವೇ ರಾಮಸೇತು. ರಾಮಸೇತುವಿನ ಇರುವಿಕೆ ಮೂರು- ನಾಲ್ಕು ಸಾವಿರ ವರ್ಷಗಳಿಂದಲೂ ಭಾರತೀಯರಿಗೆ ಪರಿಚಿತ. ರಾಮಸೇತು ರಾಮಾಯಣದಲ್ಲಿ ರಾಮ ಲಕ್ಷ್ಮಣ ಸೀತೆಯರು ವನವಾಸದಲ್ಲಿದ್ದಾಗ ನಡೆದ ಸೀತೆಯ ಅಪಹರಣದ ಪ್ರಸಂಗದ ಬಗ್ಗೆ ಕೇಳಿರುತ್ತೀರಿ. ಅಪಹರಣ ಮಾಡಿದ ಸೀತೆಯನ್ನು ರಾವಣ ತನ್ನ ಪುಷ್ಪಕ ವಿಮಾನದಲ್ಲಿ ಲಂಕೆಗೆ ಕರೆದೊಯ್ದನೆಂಬ ಮಾಹಿತಿ ಜಟಾಯು ಪಕ್ಷಿಯಿಂದ ರಾಮ ಲಕ್ಷ್ಮಣರಿಗೆ ದೊರೆಯುತ್ತದೆ. ಲಂಕೆಯಿಂದ ಸೀತೆಯನ್ನು ರಕ್ಷಿಸಿ ಕರೆತರಲು ರಾಮ ಲಕ್ಷ್ಮಣರು ವಾನರರ ಸಹಾಯ ಕೋರುತ್ತಾರೆ. ವಾನರ ಸೇನೆ ಕಡಲಿಗೆ ಕಲ್ಲು ದಿಮ್ಮಿಗಳನ್ನು ಹಾಕಿ ಜೋಡಿಸಿ ರಾಮೇಶ್ವರದಿಂದ ಕಡಲ ಮಾರ್ಗದಲ್ಲಿ ಲಂಕಾದವರೆಗೆ ಒಂದು ಸೇತುವೆ ನಿರ್ಮಿಸಿದರೆಂದು ರಾಮಾಯಣ ಹೇಳುತ್ತದೆ. ಇದು "ರಾಮಸೇತು" ಎಂದು ಪ್ರಸಿದ್ದವಾಗಿದೆ. ರಾಮಾಯಣದ ಘಟನೆಗಳು ನಾಲ್ಕು-ಐದು ಸಹಸ್ರ ವರ್ಷಗಳ ಹಿಂದೆ ನಡೆದಿರಬಹುದೆಂದು ಬಹಳ ಮಂದಿ ನಂಬುತ್ತಾರೆ. ಆದಂ ಸೇ...